ಶರಣು ಶ್ರೀಗುರುರಾಘವೇಂದ್ರಗೆ - ಜಗನ್ನಾಥದಾಸರು
ಭೀಂಪಲಾಸ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
।। ಶರಣು ಶ್ರೀಗುರುರಾಘವೇಂದ್ರಗೆ । ಶರಣು ಯತಿಕುಲ ತಿಲಕಗೆ ।।ಪ।।
।। ಶರಣು ಶರಣರ ಪೊರೆವ ಕರುಣಿಗೆ । ಶರಣು ಹರಿಗುಣಲೋಲಗೆ ।।ಅ.ಪ.।।
।। ನಿತ್ಯ ನಿರ್ಮಲ ಪುಣ್ಯಗಾತ್ರಗೆ । ಭೃತ್ಯಪಾಲಕ ಸುಗುಣಪಾತ್ರಗೆ ।।
।। ಸತ್ಯ ಜ್ಞಾನ ಸುಮೋದ ನೇತ್ರಗೆ । ಸ್ತುತ್ಯ ಯತಿವರ ಸುಗುಣಮಿತ್ರಗೆ ।।೧।।
।। ಮೋದದಾಯಕ ಭೇದಸಾಧಕ । ಮೇದಿನೀಸುರಜಾಲ ನಾಯಕ ।।
।। ಮೋದತೀರ್ಥರ ಚರಣಸೇವಕ । ಆದಿಗುರು ಜಗನ್ನಾಥವಿಠ್ಠಲ ದೂತಗೆ ।।೨।।
ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ
ಮಂತ್ರಾಲಯ ಪ್ರಭುಗಳಾದ ಗುರುರಾಯರೆಂದೆನಿಸಿದ ರಾಘವೇಂದ್ರ ಸ್ವಾಮಿಗಳ ಸ್ತುತಿ ಮಾಡಿದ್ದಾರೆ ಜಗನ್ನಾಥದಾಸರು.
ಪಲ್ಲವಿ: ರಾಘವೇಂದ್ರ ಸ್ವಾಮಿಗಳಿಗೆ, ಯತಿಗಳಲ್ಲಿ ಮುಖ್ಯರೆಂದೆನಿಸದವರಿಗೆ ಶರಣು.
ಅನುಪಲ್ಲವಿ: ಶರಣಾಗತರ ವಾ ಭಕ್ತರ ಸಲಹುವ, ಶ್ರೀಹರಿಯ ಗುಣಗಳ ಸದಾ ಸ್ತುತಿಸುವ ರಾಯರಿಗೆ ಶರಣು.
ನುಡಿ ೧: ಸದಾ ಶುಭ್ರಚರಿತರಾದ, ಪುಣ್ಯವಂತರಾದ, ಸೇವಕರ ಸಲಹುವ, ಸದ್ಗುಣವಂತರಾದ, ಸತ್ಯ-ಜ್ಞಾನ-ಆನಂದಗಳೆಂಬ ತತ್ವದ ಅನುಭಾವಿಗಳಾದ, ಸ್ತುತಿಗೆ ಪಾತ್ರರಾದ, ಸನ್ಯಾಸಿಗಳಲ್ಲಿ ಶ್ರೇಷ್ಠರಾದ ರಾಯರಿಗೆ ಶರಣು.
ನುಡಿ ೨: ಭಕ್ತರಿಗೆ ಆನಂದವನ್ನು ಕೊಡುವ, ಪಂಚಭೇದ ತತ್ವವನ್ನು ಸಾಧಿಸಿದ, ಸುಜ್ಞಾನಿಗಳ ನಾಯಕನಾದ, ಮಧ್ವಾಚಾರ್ಯರ ಸೇವಿಸುವ ಶಿಷ್ಯನಾದ, ಶ್ರೀಹರಿಯ ದೂತನಾದ ರಾಯರಿಗೆ ಶರಣು.