ಬುಧವಾರ, ಜನವರಿ 17, 2018

mAnavaru kRuta yugadali - ugAbhOga - purandaradAsaru

ಮಾನವರು ಕೃತಯುಗದಲಿ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ.


।। ಮಾನವರು ಕೃತಯುಗದಲಿ ಜಪವ ಮಾಡಲಿಬೇಕು 
ಜ್ಞಾನಸಾಧನವಿರಲಿ ಬೇಕು ತ್ರೇತಾಯುಗದಲಿ  ।
ಏನೆಂಬೆ ದ್ವಾಪರದಲಿ ಯಜ್ಞವೇ ಸಾಧನವು 
ಗಾನದಾನಗಳು ಕಲಿಯುಗದಲಿ ಪುರಂದರವಿಠ್ಠಲ ।।

ಸರಳ ಕನ್ನಡದಲ್ಲಿ ಉಗಾಭೋಗದ ಅರ್ಥ:

ಹರಿಯ ಕೃಪೆಗೆ, ಮುಕ್ತಿ ಪಡೆಯುದಕ್ಕೆ ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವಿಶೇಷ ಸಾಧನ. ಕೃತಯುಗದಲ್ಲಿ ಜಪ, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರದಲ್ಲಿ ಯಜ್ಞವಾದರೆ, ಕಲಿಯುಗದಲ್ಲಿ ಕೇವಲ ಹರಿನಾಮ ಸಂಕೀರ್ತನೆ, ಸತ್ಪಾತ್ರರಿಗೆ ದಾನ ಇವುಗಳಿಂದ ಮುಕ್ತಿಯು ಸಾಧ್ಯ ಎಂದು ಪುರಂದರದಾಸರು ಸಾರಿದ್ದಾರೆ.

ಸೋಮವಾರ, ಜನವರಿ 15, 2018

benakananolle - ugAbhOga - purandaradAsaru

ಬೆನಕನನೊಲ್ಲೆನವ್ವ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ದೇಶ ರಾಗದಲ್ಲಿ ಇಲ್ಲಿ ಕೇಳಿ.


।। ಬೆನಕನೊಲ್ಲೆನವ್ವ ಕುನಕಿಯಾಡುವನ । ಷಣ್ಮುಖನನೊಲ್ಲೆನವ್ವ ಬಹುಬಾಯಿಯವನ ।।
।। ಇಂದ್ರನನೊಲ್ಲೆನವ್ವ ಮೈಯೆಲ್ಲ ಕಣ್ಣಿನವ । ಚಂದ್ರನನೊಲ್ಲೆನವ್ವ ಖಳೆಗುಂದುವನ ।।
।। ರವಿಯನೊಲ್ಲೆನವ್ವ ಉರಿದು ಹೂಳುವನ । ಹರನನೊಲ್ಲೆನವ್ವ  ಮರುಳುಗೊಂಬುವ ।।
।। ಚೆಲುವ ಚೆನ್ನಿಗರಾಯ ಜಗಕೆಲ್ಲ ಒಡೆಯನ ತಾರೆ । ಪುರಂದರವಿಠ್ಠಲನ ತಾರೆ ।।

ಸರಳ ಕನ್ನಡದಲ್ಲಿ ಈ ಉಗಾಭೋಗದ ಅರ್ಥ:

ಲಕ್ಷ್ಮಿಯು ಕ್ಷೀರಸಮುದ್ರದಿಂದ ಜನಿಸಿ ಬಂದಾಗ ಅವಳ ಸೊಬಗಿಗೆ ಬೆರಗಾಗಿ ಸುರಾಸುರರೆಲ್ಲ ಅವಳನ್ನು ವರಿಸಲು ಸಾಲು ನಿಲ್ಲುವರು. ಆಗ ಲಕ್ಷ್ಮಿಯು ಒಬ್ಬೊಬ್ಬ ದೇವತೆಯ ಅವಗುಣವನ್ನು ಎಣಿಸಿ, ಅವರನ್ನು ನಿರಾಕರಿಸಿ, ಕಡೆಯಲ್ಲಿ ಪರಿಪೂರ್ಣನಾದ ಶ್ರೀಹರಿಯನ್ನು ವರಿಸುವಳು. ಈ ಪುರಾಣ ಕಥೆಯ ಸನ್ನಿವೇಶವನ್ನು ಬಣ್ಣಿಸುತ್ತದೆ ಪುರಂದರದಾಸರ ಈ ಉಗಾಭೋಗ.

ಗಣಪತಿಯು ಕುನಕಿಯಾಡುವ ಚಿಕ್ಕಹುಡುಗ. ಹಾಗಾಗಿ ಅವನನ್ನು ವರಿಸಲಾರೆ. ಹಾಗೆಯೇ ಷಣ್ಮುಖನಿಗೆ ಆರು ಬಾಯಿಗಳು. ಆದ್ದರಿಂದ ವರಿಸಲಾರೆ. ಇಂದ್ರ ಸಹಸ್ರಾಕ್ಷ ಅಥವಾ ಅನೇಕ ಕಣ್ಣುಳ್ಳವನು. ಹಾಗಾಗಿ ವರಿಸಲಾರೆ. ಚಂದ್ರ ತಿಂಗಳಲ್ಲಿ ಒಂದು ಪಕ್ಷ  ಕ್ಷೀಣಿಸುತ್ತಾನೆ. ಹಾಗಾಗಿ ವರಿಸಲಾರೆ. ಸೂರ್ಯನು ಸುಡುವ ಬೆಂಕಿಯಂತೆ ಇರುವನು. ಹಾಗಾಗಿ ವರಿಸಲಾರೆ.  ಶಿವನು ಮೋಹಿನಿಯನ್ನು ಕಂಡು ಮರುಳುಗೊಂಡವನು. ಹಾಗಾಗಿ ವರಿಸಲಾರೆ. ಯಾವ ಅವಗುಣವೂ ಇಲ್ಲದ ಜಗದೊಡೆಯನಾದ ಹರಿಯ ತೋರಿಸೇ ಸಖಿ. ಆ ಹರಿಯನ್ನು ವರಿಸುವೆ, ಎನ್ನುವಳು ಸಾಗರಸುತೆಯಾದ ಲಕ್ಷ್ಮೀ. 

ಭಾನುವಾರ, ಜನವರಿ 14, 2018

murahara nagadhara nEne gati - purandaradAsaru

ಮುರಹರ ನಗಧರ ನೀನೇ ಗತಿ - ಪುರಂದರದಾಸರು

ಈ ಕೃತಿಯನ್ನು ಸಿಂಧುಭೈರವಿ ರಾಗದಲ್ಲಿ ಇಲ್ಲಿ ಕೇಳಿ


।। ಮುರಹರ ನಗಧರ ನೀನೇ ಗತಿ । ಧರಣಿ-ಲಕ್ಷ್ಮೀಕಾಂತ ನೀನೇ ಗತಿ ।।ಪ|| 

।। ಶಕಟಮರ್ದನ ಶರಣಾಗತ ವತ್ಸಲ । ಮಕರಕುಂಡಲಧರ ನೀನೇ ಗತಿ ।।
।। ಅಕಳಂಕ ಚರಿತ ಆದಿನಾರಾಯಣ । ರುಕುಮಿಣಿಪತಿ ಕೃಷ್ಣ ನೀನೇ ಗತಿ ।।೧।।

।। ಮನೆಮನೆಗಳ ಪೊಕ್ಕು ಕೆನೆಹಾಲು ಬೆಣ್ಣೆಯ । ಪ್ರಮಿತ ಮೆದ್ದ ಹರಿ ನೀನೇ ಗತಿ ।।
।। ಅನುದಿನ ಭಕುತರ ಬಿಡದೆ ಸಲಹುವ । ಘನಮಹಿಮ ಕೃಷ್ಣ ನೀನೇ ಗತಿ ।।೨।।

।। ಪನ್ನಗಶಯನ ಸುಪರ್ಣಗಮನ । ಪೂರ್ಣಚರಿತ ಹರಿ ನೀನೇ ಗತಿ ।।
।। ಹೊನ್ನಹೊಳೆಯಲಿ ಪುರಂದರವಿಠ್ಠಲ । ಚೆನ್ನ ಲಕ್ಷ್ಮೀಕಾಂತ ನೀನೇ ಗತಿ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ:

ಹರಿಯೇ ನಮ್ಮೆಲ್ಲರಿಗೂ ಗತಿ ಎಂಬುವ ಸರಳ ಭಾವ ಈ ಕೃತಿಯದ್ದು.
ಪ: ಮುರಾಸುರನ ಕೆಡುವಿದ, ಗೋವರ್ಧನ ಬೆಟ್ಟವನ್ನೆತ್ತಿದ, ಲಕ್ಷ್ಮೀ-ಭೂದೇವಿಯರ ಒಡೆಯನಾದ ಹರಿಯೇ ನಮಗೆ ಗತಿ. 
ನುಡಿ ೧: ಶಕಟಾಸುರನ ಸಂಹರಿಸಿದ, ಶರಣು ಬಂದವರ ಪೊರೆಯುವನಾದ, ಮಕರಕುಂಡಲ/ಓಲೆಗಳ ಧರಿಸಿದ, ಶುಭ್ರ ಚರಿತೆಯ ಹೊಂದಿದ, ನಾರಾಯಣ ಎನಿಸಿಕೊಂಡಿಹ, ರುಕ್ಮಿಣಿಯ ಪತಿಯಾದ ಕೃಷ್ಣನೇ ಗತಿ. 
ನುಡಿ ೨: ಕೃಷ್ಣಾವತಾರದ ಬಾಲ್ಯದಲ್ಲಿ ಗೋಪಿಕೆಯರ ಮನೆಗಳನ್ನು ಹೊಕ್ಕು ಕೆನೆಹಾಲು ಬೆಣ್ಣೆ ಮೊದಲಾದವುಗಳ್ಳನ್ನ ಬೇಕಾದಷ್ಟು ತಿಂದ, ಭಕ್ತರ ಸಲಹುವನಾದ, ಅಪಾರ ಮಹಿಮೆಯುಳ್ಳವನಾದ ಕೃಷ್ಣನೇ ಗತಿ. 
ನುಡಿ ೩: ಹಾವಿನ ಮೇಲೆ ಮಲಗಿದವನಾದ, ಗರುಡನ ಮೇಲೆ ಕುಳಿತು ಹಾರುವವನಾದ, ಪೂರ್ಣಚರಿತನಾದ, ಸುಂದರನಾದ, ಲಕ್ಷ್ಮೀ ಒಡೆಯನಾದ, ಹೊನ್ನಹೊಳೆಯಲ್ಲಿ ನಿಂತ ಹರಿಯೇ ಗತಿ. 

rAma enniro - purandaradAsaru

ರಾಮ ಎನ್ನಿರೋ - ಪುರಂದರದಾಸರು

ಈ ಕೃತಿಯನ್ನು ತಿಲ್ಲಂಗ್ ಮೊದಲಾದ ರಾಗಮಾಲಿಕೆಯಲ್ಲಿ ಇಲ್ಲಿ ಕೇಳಿ


।। ರಾಮ ರಾಮ ರಾಮ ಸೀತಾ- । ರಾಮ ಎನ್ನಿರೋ ।।ಪ।। 
।। ಅಮರಪತಿಯ ದಿವ್ಯ ನಾಮ । ಅಂದಿಗೊದಗ ಬಾರದೋ ।।ಆ.ಪ।।

।। ಭರದಿ ಯಮನ ಭಟರು ಬಂದು । ಹೊರಡಿರೆಂದು ಮೇಟೆ ಮುರಿಯೆ ।।
।। ಕೊರಳಿಗಾತ್ಮ ಸೇರಿದಾಗ । ಹರಿಯ ಧ್ಯಾನ ಒದಗದೋ ।।೧।।

।। ಇಂದ್ರಿಯಂಗಳೆಲ್ಲ ಕೂಡಿ । ಬಂದು ತನುವ ಮುಸುಕಿದಾಗ ।।
।। ಸಿಂಧುಸುತೆಯ ಪತಿಯ ನಾಮ । ಅಂದಿಗೊದಗ ಬಾರದೋ ।।೨।।

।। ಶ್ವಾಸಕೋಶವೆರಡು ಕಂಠ । ಲೇಪವಾಗಿ ಸಿಲುಕಿದಾಗ ।।
।। ವಾಸುದೇವ ಕೃಷ್ಣನ ನಾಮ । ಆ ಸಮಯಕೆ ಒದಗದೋ  ।।೩।।

।। ಶೃಂಗಾರದ ದೇಹವೆಲ್ಲ । ಅಂಗ ಬಡಿದು ಮುರಿದು ಬಿದ್ದು ।।
।। ಕಂಗಳಿಗಾತ್ಮ ಸೇರಿದಾಗ । ರಂಗನ ನಾಮ ಒದಗಡೂ ।।೪।।

।। ವಾತ-ಪಿತ್ತವೆರಡು ಕೂಡಿ । ಶ್ಲೇಷ್ಮ ಬಂದು ಒದಗಿದಾಗ ।।
।। ಧಾತು ಗುಣದಿಂದಾಗ ರಘು- । ನಾಥನ ಧ್ಯಾನ ಒದಗದೋ ।।೫।।

।। ಕಲ್ಲು-ಮರಗಳಂತೆಯೇ ಜೀವ? । ನಿಲ್ಲದಂತೆ ಮರಣ ವೇಳೆ ।।
।। ಫುಲ್ಲನಾಭ ಶ್ರೀಕೃಷ್ಣನೆಂಬೋ । ಸೊಲ್ಲು ಬಾಯಿಗೊದಗದೋ ।।೬।।

।। ಕೆಟ್ಟ ಜನ್ಮದಲ್ಲಿ ಪುಟ್ಟಿ । ದುಷ್ಟಕರ್ಮ ಮಾಡಿ ದೇಹ- ।।
।। ಬಿಟ್ಟು ಹೋಗುವಾಗ ಪುರಂದರ- । ವಿಠ್ಠಲನ ನಾಮ ಒದಗದೋ ।।೭।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ: 

ಮರಣ ಕಾಲದೊಳು ಹರಿಯ ಸ್ಮರಣೆ ಬರುವುದು ಸುಲಭವಲ್ಲ. ಹಾಗಾಗಿ ಇಂದೇ ಅಮರಪತಿ/ದೇವತೆಗಳ ಒಡೆಯನಾದ ರಾಮನ ಸ್ಮರಣೆ ಮಾಡಿ ಎಂದಿದ್ದಾರೆ ಪುರಂದರದಾಸರು. (ಹಿನ್ನೆಲೆ: ಮರಣ ಕಾಲದಲ್ಲಿ ಹರಿಸ್ಮರಣೆ ಮಾಡಿದರೆ ಮುಕ್ತಿ ಸಿಗುವುದು ಎಂಬುದು ನಂಬಿಕೆ.)
ನುಡಿ ೧: ಮರಣ ಸಮಯದಿ ಯಮನ ದೂತರು ಬಂದು ಜೀವವನ್ನು ಸೆಳೆವಾಗ, ಉಸಿರು ನಿಂತು ಪ್ರಾಣ ಹೋಗುವ ಸಮಯದಲ್ಲಿ ಹರಿಯ ಧ್ಯಾನ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ. 
ನುಡಿ ೨: ಮರಣ ಸಮಯದಲ್ಲಿ ಇಂದ್ರಿಯಗಳೆಲ್ಲಾ ಸೆಟೆದು ಬಿದ್ದಾಗ, ದೇಹ-ಮನಸ್ಸುಗಳು ಕುಗ್ಗಿದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೩: ಶ್ವಾಸಕೋಶಗಳು ಕಟ್ಟಿ ಉಸಿರು ನಿಂತಾಗ ಹರಿ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ. 
ನುಡಿ ೪: ಇಂದು ಗಟ್ಟಿಮುಟ್ಟಾದ ಈ ದೇಹ ಅಂದು, ಮರಣ ಸಮಯದಂದು, ಮುರಿದು ಬಿದ್ದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೫: ಈ ದೇಹದ ಮೂರು ದೋಷಗಳು (ವಾತ, ಪಿತ್ತ, ಕಫ/ಶ್ಲೇಷ್ಮ) ಬಾಧಿಸಿ ಸಪ್ತ ಧಾತುಗಳು (ರಸ, ರಕ್ತ, ಮಾಂಸ, ಮೂಳೆ, ಮಜ್ಜೆ, ಮೇಧಸ್ಸು, ಶುಕ್ರ) ಕುಗ್ಗಿದ ಮರಣ ಸಮಯದಲ್ಲಿ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೬: ಕಲ್ಲು-ಮರಗಳಂತೆಯಲ್ಲ ಈ ಜೀವ. ಸಾವು ಬರುವುದು ಖಂಡಿತ. ಆದರೆ ಸಾಯುವ ಸಮಯದಲ್ಲಿ ಕಮಲನಾಭನಾದ ಹರಿಯ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೭: ಸಂಸಾರ ಚಕ್ರದಲ್ಲಿ ಬಿದ್ದು ಬಳಲುವಂತಹ ಜನ್ಮದಲ್ಲಿ ಬಂದು, ಅನೇಕ ಪಾಪಕರ್ಮಗಳ ಮಾಡಿ, ಕೊನೆಗೆ ಮರಣ ಸಮದಲ್ಲಿ ಹರಿಯ ಸ್ಮರಣೆ ಬರಲಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.