ಶನಿವಾರ, ಸೆಪ್ಟೆಂಬರ್ 30, 2017

pAlise padumAlayE - vijayadAsaru

ಪಾಲಿಸೆ ಪದುಮಾಲಯೇ - ವಿಜಯದಾಸರ  ಕೃತಿ

ಮಧ್ಯಮಾವತಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ. 


|| ಪಾಲಿಸೆ ಪದುಮಾಲಯೆ | ನೀನೇ ಗತಿ ಪಾಲಿಸೆ ಪದುಮಾಲಯೆ ||ಪ||

|| ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ |
ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿಹ ಬಾಲಕನ ಪ್ರಿಯೆ ||ಅಪ||

||ಅರಿಯದ ತರಳನೆಂದು ಶ್ರೀಪತಿ ಸತಿ ವರವಿತ್ತು ಸಲಹೆ ಬಂಧು | ಕಾರುಣ್ಯ ಸಿಂಧು ||
||ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖರು ಸುರರ ಬಾಧಿಸೆ |
ಹರಿವರದ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ ||೧||

||ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದವನ್ನು ನಂಬಿದೆ ನೀ ಬಲ್ಲೆ | ತಡ ಮಾಡಲೊಲ್ಲೆ ||
|| ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ |
ಗುಣ ಸಂಪನ್ನ ರಕ್ಕಸರನ್ನು ಸೀಳಿದ ಪನ್ನಗಾದ್ರಿ ನಿವಾಸ ಹರಿಪ್ರಿಯೆ ||೨||

||ಅಜಭವಾಮರರ ಜನನಿ ಅಂಬುಜಪಾಣಿ ತ್ರಿಜಗ ಸನ್ನಿಭ ವೇಣಿ | ನಿತ್ಯ ಕಲ್ಯಾಣಿ ||
|| ಕುಜನ ಮರ್ದನ  ವಿಜಯವಿಠ್ಠಲ  ಭಜಿಸಿ ಪಾಡುವ ಭಕ್ತ ಕೂಟದಿ |
ನಿಜದಿ ಸಲಹುವೆನೆಂಬ ಬಿರುದುಳ್ಳ ವಿಜಯಸಾರಥಿ ವಿಶ್ವಂಬರ ಪ್ರಿಯೆ ||೩||

ಸರಳ ಕನ್ನಡಲ್ಲಿ ಕೃತಿಯ ಅರ್ಥ 

ಲಕ್ಷ್ಮಿಯನ್ನು ಪದ್ಮಾಲಯೇ ಎಂದು ಇಲ್ಲಿ ಸಂಬೋಧಿಸಲಾಗಿದೆ. ಕೃತಿಯು ದೇವಿಯನ್ನು ಹರಿಯ ಒಡತಿಯೆಂದು ಸ್ತುತಿಸಿ ಕಾಪಾಡು ಎಂದು ಪ್ರಾರ್ಥಿಸುತ್ತದೆ. 
ಅನುಪಲ್ಲವಿ: ಗೋಪಿಯರಿಗೆ ಪ್ರಿಯನಾದ, ದುಷ್ಟರ ಶತ್ರುವಾದ ಬಾಲಕೃಷ್ಣನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು  
ನುಡಿ : ನನ್ನನ್ನು ಏನೂ ಅರಿಯದ ಬಾಲಕನೆಂದು ಸಲಹು, ಓ ಕರುಣೆಯ ಕಡಲೇ,
ಬ್ರಹ್ಮ ಮತ್ತು ಶಿವನ ವರಗಳಿಂದ ಬಲಿಷ್ಠರಾಗಿ ರಾವಣಾದಿ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿದಾಗ, ಕಪಿಸೈನ್ಯದೊಂದಿಗೆ ರಾಕ್ಷಸರನ್ನು ಬಗ್ಗುಬಡಿದು ರಾವಣನ ಕೊಂದ ರಾಮನ ಪ್ರಿಯೆ, ಓ ಪದ್ಮಾಲಯೇ ಕಾಪಾಡು 
ನುಡಿ ೨: ಇನ್ನಾರನ್ನೂ ಬೇಡುವುದಿಲ್ಲ, ನಿನ್ನ ಮೊರೆ ಇಡುವೆ, ತಡಮಾಡದೆ ಕಾಪಾಡು. 
ಪ್ರಹ್ಲಾದನ ಕರೆಗೆ ನರಸಿಂಹ ಅವತಾರವನ್ನೇ ತಾಳಿ ಬಂದು ಹಿರಣ್ಯಕಶಿಪು ಮೊದಲಾದ ರಾಕ್ಷಸರನ್ನು ಸಂಹರಿಸಿದ, ಘನಮಹಿಮನಾದ, ಗುಣಪೂರ್ಣನಾದ, ಶೇಷಾಚಲ ವಾಸಿಯಾದ, ಹರಿಯ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು. 
ನುಡಿ ೩: ಓ ಬ್ರಹ್ಮ-ಶಿವ-ಮೊದಲಾದ ದೇವತೆಗಳ ಮಾತೆಯೇ, ಕಮಲದಂತೆ ಇರುವ ಪಾದವುಳ್ಳವಳೇ, ಮೂರು ಲೋಕವನ್ನೇ ಜಡೆಯಂತೆ ಮುಡಿದವಳೇ, ಮಂಗಳೆ,
ದುರ್ಜನರ ಶತ್ರುವಾದ, ಭಕ್ತರ ರಕ್ಷಕನೆಂದು ಬಿರುದುಳ್ಳವನಾದ, ವಿಜಯಸಾರಥಿಯಾದ, ವಿಶ್ವವೆಲ್ಲ ಆವರಿಸಿರುವ ವಿಷ್ಣುವಿನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು.

ballavareniparu - kanakadAsaru

ಬಲ್ಲವರೆನಿಪರು - ಕನಕದಾಸರ ಅಪರೂಪದ ಕೃತಿ

ವಿದ್ವಾನ್  ಆರ್. ಕೆ. ಶ್ರೀಕಂಠನ್ ರವರ ಧ್ವನಿಯಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ. 


|| ಬಲ್ಲವರೆನಿಪರು ಎಲ್ಲಾರು ಅರಿಯರು ||ಪ||
|| ಫುಲ್ಲಲೋಚನ ಪೂರ್ಣ ಬ್ರಹ್ಮನೆಂಬುದನು ||ಅ.ಪ||

||ಅಜಜನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ
ಗಜಚರ್ಮಾಂಬರ ಬಲ್ಲ ಗರುಡ ಬಲ್ಲ |
ಭುಜಗೇಶ್ವರ ಬಲ್ಲ ಭೂಮಿಲೋಚನ ಬಲ್ಲ
ತ್ರಿಜಗಾಧಿಪ ತ್ರಿವಿಕ್ರಮನೆಂಬುದನು ||೧||

|| ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ
ಅಕೂಟ ಪ್ರಹ್ಲಾದ ಬಲ್ಲ ಬಲಿಯು ಬಲ್ಲ |
ರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲ
ಮಕರಕುಂಡಲಧರ ಪರಮಾತ್ಮನೆಂಬುದೆನು ||೨||

|| ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲ
ಅಂಬರಾಧಿಪ ಬಲ್ಲ ಹಯದೇವ ಬಲ್ಲ |
ಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲ
ಕಂಬುಚಕ್ರಾಂಕಿತ ಕರ್ಮಹರನೆಂಬುದನು ||೩||

|| ವಸಿಷ್ಠ ಮುನಿ ಬಲ್ಲ ವರ ವಿಭೀಷಣ ಬಲ್ಲ
ವಿಶಿಖಶಯನ ಬಲ್ಲ ವಿದುರ ಬಲ್ಲ |
ರಸಿಕ ವಾಲ್ಮೀಕಿ ಬಲ್ಲ ರಾಜಜನಕ ಬಲ್ಲ
ಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು ||೪||

|| ವಾಖೆಯಾಕ್ರೂರ ಬಲ್ಲ ವಚನದಿ ಶೌನಕ ಬಲ್ಲ
ಯೋಗಿ ಕಪಿಲ ಬಲ್ಲ ಭೃಗು ಬಲ್ಲನು
ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ
ಕಾಗಿನೆಲೆಯಾದಿ ಕೇಶವನೆಂಬುದನು ||೫||

ಸರಳ ಕನ್ನಡದಲ್ಲಿ ಕೃತಿಯ ಅರ್ಥ

ಪರಬ್ರಹ್ಮನೆಂದು ವೇದಗಳಲ್ಲಿ ಕರೆಸಿಕೊಳ್ಳುವ ಆ ದೇವನನ್ನು ಅನೇಕರು ತಿಳಿದಿರುವೆನೆಂದು ಭಾವಿಸುವರು, ಆದರೆ ಎಲ್ಲರೂ ತಿಳಿದಿರಲಾರರು ಎಂದು ಕನಕದಾಸರು ಹೇಳಿರುವರು.
ಆ ಪರದೈವವನ್ನು ನಿಜವಾಗಿ ತಿಳಿದಿರುವ ಅನೇಕ ಪೌರಾಣಿಕ ವ್ಯಕ್ತಿಗಳನ್ನು ಈ ಕೃತಿಯ ನುಡಿಗಳು ಪಟ್ಟಿಮಾಡಿ ಉಲ್ಲೇಖಿಸುತ್ತವೆ.