ಶುಕ್ರವಾರ, ಮಾರ್ಚ್ 9, 2018

mADu sikkadalla - purandaradAsaru

ಮಾಡು ಸಿಕ್ಕದಲ್ಲ - ಪುರಂದರದಾಸರು 

ಮಾಯಮಾಳವಗೌಳ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಮಾಡು ಸಿಕ್ಕದಲ್ಲಾ ಮಾಡಿನ । ಗೂಡು ಸಿಕ್ಕದಲ್ಲಾ ।।ಪ।।
।। ಜೋಡುಹೆಂಡಿರಂಜಿ ಓಡಿ ಹೋಗುವಾಗ । ಗೋಡೆ ಬಿದ್ದು ಬಯಲಾಯಿತಲ್ಲ ।।ಅ.ಪ।।

।। ಎಚ್ಚರಗೊಳಲಿಲ್ಲ ಮನವೇ । ಹುಚ್ಚನಾದೆನಲ್ಲಾ ।।
।। ಅಚ್ಚಿನೊಳಗೆ ಮೆಚ್ಚು । ಮೆಚ್ಚಿನೊಳಗೆ ಅಚ್ಚು ।।
।। ಕಿಚ್ಚೆದ್ದು ಹೋಯಿತಲ್ಲಾ । ಮಾಡು ಸಿಕ್ಕದಲ್ಲಾ ।।೧।।

।। ಮುಪ್ಪು ಬಂದಿತಲ್ಲಾ ತಪ್ಪದೆ । ಪಾಯಸ ಉಣಲಿಲ್ಲಾ ।।
।। ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ । ಧೊಪ್ಪನೆ ಬಿತ್ತಂತಾಯಿತಲ್ಲಾ ।।೨।।

।। ಯೋಗವು ಬಂತಲ್ಲಾ ಅದುಪರಿ- । ಭಾಗವಾಯಿತಲ್ಲಾ ।।
।। ಭೋಗಿಶಯನ ಶ್ರೀಪುರಂದರವಿಠ್ಠಲನ । ಆಗ ನೆನೆಯಲಿಲ್ಲಾ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ವ್ಯರ್ಥವಾಗಿ ಕಳೆದ ಜೀವನದ ಬಗ್ಗೆ ಪಶ್ಚಾತ್ತಾಪಪಡುವ ಚಿಂತನೆಯನ್ನು ಗೂಢವಾಗಿ ಈ ಕೃತಿಯಲ್ಲಿ ವಿವರಿಸುವ ಮೂಲಕ ನಮ್ಮೆಲ್ಲರನ್ನು ಎಚ್ಚರಿಸಿದ್ದಾರೆ ಪುರಂದರದಾಸರು.
ಪಲ್ಲವಿ: ಉತ್ಕೃಷ್ಟ ವಸ್ತುಗಳನ್ನು ಇರಿಸುವ ಮಾಡದ ಗೂಡು ಸಿಕ್ಕದಾಯಿತಲ್ಲಾ. ಒಳಾರ್ಥವಾಗಿ ಬದುಕಿನ ಸಾರ್ಥಕ್ಯ, ಮುಕ್ತಿ ಸಾಧನ ಕೈಗೆ ಎಟುಕದಾಯಿತಲ್ಲಾ. ಇಬ್ಬರು ಹೆಂಡತಿಯರು ಎಂದರೆ ಹಗಲು-ರಾತ್ರಿಗಳು ಕಾಲದ ವೇಗಕ್ಕೆ ಹೆದರಿ ಓಡುವಾಗ, ಗೋಡೆ ಬಿದ್ದು ಎಂದರೆ ದೇಹವು ಶಿಥಿಲವಾಗಿ, ಬಯಲಾಯಿತಲ್ಲಾ ಎಂದರೆ ಎಲ್ಲಾ ಇಹ ಲೋಕದ ಸುಖಗಳು ಇಲ್ಲವಾಯಿತಲ್ಲಾ ಎಂದು.
ನುಡಿ ೧: ಎಚ್ಚರಗೊಳ್ಳದೆಯೇ ಮನಸ್ಸು ಈಗ ಹುಚ್ಚುಹಿಡಿದಂತಾಯಿತಲ್ಲಾ. ಅಚ್ಚು ಎಂದರೆ ಈ ದೇಹ. ಈ ದೇಹದಿಂದ ಸಿಗುವ ಸುಖವನ್ನೇ ಬಯಸಿ, ಆ ಬಯಕೆಗಳಲ್ಲಿ ಮನಸ್ಸನ್ನು ತೊಡಗಿಸಿ, ಕೊನೆಗೆ ಕಿಚ್ಚು ಹೋಯಿತಲ್ಲ ಎಂದರೆ ದೇಹದಾರ್ಢ್ಯ ಹೋಗಿ ಮುಪ್ಪಾಯಿತಲ್ಲಾ ಎಂದು.
ನುಡಿ ೨: ಮುಪ್ಪು ಬರುವಾ ಮುನ್ನಾ ಮುಕ್ತಿಸಾಧನೆ ಮಾಡಲಿಲ್ಲವಲ್ಲಾ. ಮಾನವಜನ್ಮ ಎಂಬ ತುಪ್ಪದ ಬಿಂದಿಗೆ ವ್ಯರ್ಥವಾಗಿ ತಿಪ್ಪೆಗೆ ಬಿದ್ದಂತೆ ಆಯಿತಲ್ಲಾ.
ನುಡಿ ೩: ಮಾನವಜನ್ಮದ ಮುಕ್ತಿಸಾಧನೆಗೆ ಯೋಗ್ಯವಾದ ಶರೀರ ಬಂದಿತ್ತು. ಆದರೆ ಅದರ ಸದುಪಯೋಗವಾಗದೆಯೇ ಈ ಶರೀರ ಶಿಥಿಲವಾಗಿದೆಯಲ್ಲಾ. ಗಟ್ಟಿ-ಮುಟ್ಟಾದ ಕಾಲದಲ್ಲಿ ಶ್ರೀಹರಿಯ ಧ್ಯಾನ ಮಾಡದೆಯೇ ವ್ಯರ್ಥವಾಗಿ ಕಾಲ ಕಳೆದೆನಲ್ಲಾ.

neere nee karetaare - purandaradAsaru

ನೀರೇ ನೀ ಕರಿತಾರೆ - ಪುರಂದರದಾಸರು

ದೇಶ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ನೀರೇ ನೀ ಕರಿತಾರೆ ಸುಂದರನ । ಮಾರಸುಂದರನ ಸುಕುಮಾರ ಶರೀರನ ।।ಪ।। 
।। ಗೊಲ್ಲರ ಮನೆಯೊಳಗೆ ಇದ್ದ ಪಾಲ್ಮೊಸರ । ಮೆಲ್ಲನೆ ಮೆಲ್ಲುವ ವಲ್ಲಭ ಹರಿಯ ।।೧।।
।। ಯಾದವರೆಲ್ಲರ ಆದರಿಸಿದನ ವೇದ- । ವೇದಾಂತನ ಯಾದವ ಪ್ರಿಯನ ।।೨।।
।। ವರಗೌರಿಪುರದಲ್ಲಿ ವಾಸವಾಗಿಹನ । ವರದ ಪುರಂದರವಿಠ್ಠಲ ರಾಯನ ।।೩।।

enagoo aaNe ranga - purandaradAsaru

ಎನಗೂ ಆಣೆ ರಂಗ ನಿನಗೂ ಆಣೆ - ಪುರಂದರದಾಸರು

ಈ ಕೃತಿಯನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ


।। ಎನಗೂ ಆಣೆ ರಂಗ ನಿನಗೂ ಆಣೆ ।
ಎನಗೂ ನಿನಗೂ ಇಬ್ಬರಿಗೂ ನಿನ ಭಕ್ತರಾಣೆ ।।ಪ।।

।। ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ।
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ ।।೧।।

।। ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ ।
ಮನಸು ನಿನ್ನಲಿ ನಿಲ್ಲಿಸದಿದ್ದರೆ ನಿನಗೆ ಆಣೆ ।।೨।।

।। ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ ರಂಗ ।
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।೩।।

।। ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ।
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।೪।।

।। ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ।
ಪುರಂದರವಿಠಲ ನೀನೊಲಿಯದಿದ್ದರೆ ನಿನಿಗೆ ಆಣೆ ।।೫।।


ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವರ್ತಕರು ತಮ್ಮ ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ಗೆಳೆಯರು ಆಟದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ದಾಸರು ಶ್ರೀಹರಿಯ ಜೊತೆ ಒಪ್ಪಂದದ ಮಾತನಾಡುತ್ತಿದ್ದಾರೆ ಈ ಕೃತಿಯಲ್ಲಿ. ಒಬ್ಬರಿನ್ನೊಬ್ಬರಿಗೆ ನಿಬಂಧ ಹಾಕಿಕೊಳ್ಳುವುದರಲ್ಲಿ ಪರಸ್ಪರ ಭಾವಾನುಬಂಧವು ಎದ್ದು ತೋರುತ್ತಿದೆ ಈ ದಾಸವಾಣಿಯಲ್ಲಿ. 
ಪಲ್ಲವಿ: ನನಗೊಂದು ನಿಬಂಧವಾದರೆ ನಿನಗೆ (ಶ್ರೀಹರಿಗೆ) ಮತ್ತೊಂದು ನಿಬಂಧ. ಮತ್ತು ನಮ್ಮಿಬ್ಬರಿಗೂ ನಮ್ಮ ಮಾತುಗಳನ್ನು ತಪ್ಪದಿರಲು  ಭಕ್ತರ ನಿಬಂಧನೆ.
ನುಡಿ ೧: ನಿನ್ನ ಬಿಟ್ಟು ಬೇರಾರನ್ನೂ ಭಜಿಸುವುದಿಲ್ಲ ಎಂಬುದು ನನ್ನ ನಿಬಂಧ/ಮಾತು. ಇದು ಸತ್ಯವಾಗಬೇಕಿದ್ದರೆ ನೀನು ನನ್ನ ಕೈಬಿಡುಬಾರದು.
ನುಡಿ ೨: ದೇಹಶಕ್ತಿ, ಮನಶ್ಶಕ್ತಿ, ಧನಶಕ್ತಿ ಯಾವುದರಿಂದಲೂ ವಂಚನೆ ಮಾಡುವುದಿಲ್ಲ ಎಂಬದು ನನ್ನ ಮಾತು. ಇದು ನಡೆಯಬೇಕಾದರೆ ನೀನು ನನ್ನ ಮನಸ್ಸನ್ನು ನಿನ್ನಲ್ಲಿ ನಿಲ್ಲಿಸಬೇಕು (ಅಥವಾ ನನ್ನಲ್ಲಿ ನಿನ್ನ ಭಕ್ತಿಯನ್ನು ಸ್ಥಿರವಾಗಿಸಬೇಕು).  
ನುಡಿ ೩: ಕೆಟ್ಟ ಜನರ ಸಹವಾಸ ಮಾಡುವುದಿಲ್ಲ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ಈ ಲೋಕದ ಮೇಲಿನ ಆಸೆ ಅಥವಾ ಸಂಸಾರದ ಮೋಹವನ್ನು ಬಿಡಿಸಬೇಕು. 
ನುಡಿ ೪: ಸಜ್ಜನರ ಒಡನಾಟ ಮಾಡದೆಯೇ ಇರುವುದಿಲ್ಲ ಎಂಬುದು ನನ್ನ ಮಾತಾದರೆ, ನೀನು ಕೆಟ್ಟವರ ಒಡನಾಟವನ್ನು ಬಿಡಿಸದೆ ಇರುವಂತಿಲ್ಲ.
ನುಡಿ ೫: ನಿನ್ನ ನಂಬದೆಯೇ ನಾನು ಬದುಕಲಾರೆ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ನನಗೆ ಒಲಿಯಬೇಕು ಅಥವಾ ನನ್ನನ್ನು ಸಲಹಬೇಕು.