ಶುಕ್ರವಾರ, ಮಾರ್ಚ್ 9, 2018

enagoo aaNe ranga - purandaradAsaru

ಎನಗೂ ಆಣೆ ರಂಗ ನಿನಗೂ ಆಣೆ - ಪುರಂದರದಾಸರು

ಈ ಕೃತಿಯನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ


।। ಎನಗೂ ಆಣೆ ರಂಗ ನಿನಗೂ ಆಣೆ ।
ಎನಗೂ ನಿನಗೂ ಇಬ್ಬರಿಗೂ ನಿನ ಭಕ್ತರಾಣೆ ।।ಪ।।

।। ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ।
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ ।।೧।।

।। ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ ।
ಮನಸು ನಿನ್ನಲಿ ನಿಲ್ಲಿಸದಿದ್ದರೆ ನಿನಗೆ ಆಣೆ ।।೨।।

।। ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ ರಂಗ ।
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।೩।।

।। ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ।
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।೪।।

।। ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ।
ಪುರಂದರವಿಠಲ ನೀನೊಲಿಯದಿದ್ದರೆ ನಿನಿಗೆ ಆಣೆ ।।೫।।


ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವರ್ತಕರು ತಮ್ಮ ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ಗೆಳೆಯರು ಆಟದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ದಾಸರು ಶ್ರೀಹರಿಯ ಜೊತೆ ಒಪ್ಪಂದದ ಮಾತನಾಡುತ್ತಿದ್ದಾರೆ ಈ ಕೃತಿಯಲ್ಲಿ. ಒಬ್ಬರಿನ್ನೊಬ್ಬರಿಗೆ ನಿಬಂಧ ಹಾಕಿಕೊಳ್ಳುವುದರಲ್ಲಿ ಪರಸ್ಪರ ಭಾವಾನುಬಂಧವು ಎದ್ದು ತೋರುತ್ತಿದೆ ಈ ದಾಸವಾಣಿಯಲ್ಲಿ. 
ಪಲ್ಲವಿ: ನನಗೊಂದು ನಿಬಂಧವಾದರೆ ನಿನಗೆ (ಶ್ರೀಹರಿಗೆ) ಮತ್ತೊಂದು ನಿಬಂಧ. ಮತ್ತು ನಮ್ಮಿಬ್ಬರಿಗೂ ನಮ್ಮ ಮಾತುಗಳನ್ನು ತಪ್ಪದಿರಲು  ಭಕ್ತರ ನಿಬಂಧನೆ.
ನುಡಿ ೧: ನಿನ್ನ ಬಿಟ್ಟು ಬೇರಾರನ್ನೂ ಭಜಿಸುವುದಿಲ್ಲ ಎಂಬುದು ನನ್ನ ನಿಬಂಧ/ಮಾತು. ಇದು ಸತ್ಯವಾಗಬೇಕಿದ್ದರೆ ನೀನು ನನ್ನ ಕೈಬಿಡುಬಾರದು.
ನುಡಿ ೨: ದೇಹಶಕ್ತಿ, ಮನಶ್ಶಕ್ತಿ, ಧನಶಕ್ತಿ ಯಾವುದರಿಂದಲೂ ವಂಚನೆ ಮಾಡುವುದಿಲ್ಲ ಎಂಬದು ನನ್ನ ಮಾತು. ಇದು ನಡೆಯಬೇಕಾದರೆ ನೀನು ನನ್ನ ಮನಸ್ಸನ್ನು ನಿನ್ನಲ್ಲಿ ನಿಲ್ಲಿಸಬೇಕು (ಅಥವಾ ನನ್ನಲ್ಲಿ ನಿನ್ನ ಭಕ್ತಿಯನ್ನು ಸ್ಥಿರವಾಗಿಸಬೇಕು).  
ನುಡಿ ೩: ಕೆಟ್ಟ ಜನರ ಸಹವಾಸ ಮಾಡುವುದಿಲ್ಲ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ಈ ಲೋಕದ ಮೇಲಿನ ಆಸೆ ಅಥವಾ ಸಂಸಾರದ ಮೋಹವನ್ನು ಬಿಡಿಸಬೇಕು. 
ನುಡಿ ೪: ಸಜ್ಜನರ ಒಡನಾಟ ಮಾಡದೆಯೇ ಇರುವುದಿಲ್ಲ ಎಂಬುದು ನನ್ನ ಮಾತಾದರೆ, ನೀನು ಕೆಟ್ಟವರ ಒಡನಾಟವನ್ನು ಬಿಡಿಸದೆ ಇರುವಂತಿಲ್ಲ.
ನುಡಿ ೫: ನಿನ್ನ ನಂಬದೆಯೇ ನಾನು ಬದುಕಲಾರೆ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ನನಗೆ ಒಲಿಯಬೇಕು ಅಥವಾ ನನ್ನನ್ನು ಸಲಹಬೇಕು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ