ಗುರುವಾರ, ಏಪ್ರಿಲ್ 19, 2018

sharaNu shree guru rAghavEndrage - jagannAthadAsaru

ಶರಣು ಶ್ರೀಗುರುರಾಘವೇಂದ್ರಗೆ - ಜಗನ್ನಾಥದಾಸರು 

ಭೀಂಪಲಾಸ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಶರಣು ಶ್ರೀಗುರುರಾಘವೇಂದ್ರಗೆ । ಶರಣು ಯತಿಕುಲ ತಿಲಕಗೆ ।।ಪ।।
।। ಶರಣು ಶರಣರ ಪೊರೆವ ಕರುಣಿಗೆ । ಶರಣು ಹರಿಗುಣಲೋಲಗೆ ।।ಅ.ಪ.।।

।। ನಿತ್ಯ ನಿರ್ಮಲ ಪುಣ್ಯಗಾತ್ರಗೆ । ಭೃತ್ಯಪಾಲಕ ಸುಗುಣಪಾತ್ರಗೆ ।।
।। ಸತ್ಯ ಜ್ಞಾನ ಸುಮೋದ ನೇತ್ರಗೆ । ಸ್ತುತ್ಯ ಯತಿವರ ಸುಗುಣಮಿತ್ರಗೆ ।।೧।।

।। ಮೋದದಾಯಕ ಭೇದಸಾಧಕ । ಮೇದಿನೀಸುರಜಾಲ ನಾಯಕ ।।
।। ಮೋದತೀರ್ಥರ ಚರಣಸೇವಕ । ಆದಿಗುರು ಜಗನ್ನಾಥವಿಠ್ಠಲ ದೂತಗೆ ।।೨।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ಮಂತ್ರಾಲಯ ಪ್ರಭುಗಳಾದ ಗುರುರಾಯರೆಂದೆನಿಸಿದ ರಾಘವೇಂದ್ರ ಸ್ವಾಮಿಗಳ ಸ್ತುತಿ ಮಾಡಿದ್ದಾರೆ ಜಗನ್ನಾಥದಾಸರು. 
ಪಲ್ಲವಿ:  ರಾಘವೇಂದ್ರ ಸ್ವಾಮಿಗಳಿಗೆ, ಯತಿಗಳಲ್ಲಿ ಮುಖ್ಯರೆಂದೆನಿಸದವರಿಗೆ ಶರಣು. 
ಅನುಪಲ್ಲವಿ: ಶರಣಾಗತರ ವಾ ಭಕ್ತರ ಸಲಹುವ, ಶ್ರೀಹರಿಯ ಗುಣಗಳ ಸದಾ ಸ್ತುತಿಸುವ ರಾಯರಿಗೆ ಶರಣು. 
ನುಡಿ ೧: ಸದಾ ಶುಭ್ರಚರಿತರಾದ, ಪುಣ್ಯವಂತರಾದ, ಸೇವಕರ ಸಲಹುವ, ಸದ್ಗುಣವಂತರಾದ, ಸತ್ಯ-ಜ್ಞಾನ-ಆನಂದಗಳೆಂಬ ತತ್ವದ ಅನುಭಾವಿಗಳಾದ, ಸ್ತುತಿಗೆ ಪಾತ್ರರಾದ,  ಸನ್ಯಾಸಿಗಳಲ್ಲಿ ಶ್ರೇಷ್ಠರಾದ ರಾಯರಿಗೆ ಶರಣು. 
ನುಡಿ ೨: ಭಕ್ತರಿಗೆ ಆನಂದವನ್ನು ಕೊಡುವ, ಪಂಚಭೇದ ತತ್ವವನ್ನು ಸಾಧಿಸಿದ, ಸುಜ್ಞಾನಿಗಳ ನಾಯಕನಾದ, ಮಧ್ವಾಚಾರ್ಯರ ಸೇವಿಸುವ ಶಿಷ್ಯನಾದ, ಶ್ರೀಹರಿಯ ದೂತನಾದ ರಾಯರಿಗೆ ಶರಣು. 

eesa bEku iddu jayisa bEku - purandaradAsaru

ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು

ಈ ಕೃತಿಯನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ


।। ಈಸ ಬೇಕು ಇದ್ದು ಜಯಿಸಬೇಕು ।।ಪ।।
।। ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ।।ಅ.ಪ.।।

।। ತಾಮರಸ ಜಲದಂತೆ ಪ್ರೇಮವಿತ್ತು ಭವದೊಳು ।
ಸ್ವಾಮಿ ರಾಮನೆನುತ ಪಾಡಿ ಕಾಮಿತಕ್ಕೆ ಕೊಂಬೊರೆಲ್ಲ ।।೧।।

।। ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ।
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ನೆನೆವರೆಲ್ಲ ।।೨।।

।। ಮಾಂಸದಾಸೆಗೆ ಸಿಲುಕಿ ಮತ್ಸ್ಯ ಹಿಂಸೆಪಟ್ಟ ಪರಿಯಂತೆ ।
ಮೋಸಹೋಗದ್ಹಾಂಗೆ ಜಗದೀಶ ಪುರಂದರವಿಠ್ಠಲನೆನುತ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ಕರ್ಮಸಿದ್ಧಾಂತದ ಸಾರವನ್ನೆಲ್ಲಾ ಎರಡೇ ಸಾಲಿನಲ್ಲಿ ಅಡಗಿಸಿಟ್ಟಿರುವರು ಪುರಂದರದಾಸರು. ಈ ಸಂಸಾರದ ಅಥವಾ ನಮ್ಮ ಜೀವನದ ಸುಖದುಃಖಗಳ ಜಂಜಾಟದಲ್ಲಿ ಪ್ರತಿಫಲದ ಅಪೇಕ್ಷೆ ಇಲ್ಲದೆ ಕರ್ತವ್ಯಗಳನ್ನು ಮಾಡಬೇಕು, ಮಾಡಿ ಮುಕ್ತಿಯನ್ನು ಜಯಿಸಬೇಕು. 
ನುಡಿ ೧: ಹೇಗೆ ತಾವರೆಯ ಎಲೆಯ ಮೇಲಿರುವ ನೀರಿನ ಹನಿ ಅಂತದೆಯೇ ಇರುವುದೋ, ಹಾಗೆಯೇ ಈ ಜೀವನದಲ್ಲಿ ಇದ್ದೂ ಅದರ ಒಳಿತು-ಕೆಡಕುಗಳನ್ನು ಅಂಟಿಸಿಕೊಳ್ಳದಂತೆ, ಪ್ರತಿಯೊಂದು ಕೆಲಸವನ್ನೂ ಶ್ರೀಹರಿಯ ಕೆಲಸವೆಂದು ಭಾವಿಸಬೇಕು. 
ನುಡಿ ೨: ಗೇರುಹಣ್ಣಿನಲ್ಲಿ ಬೀಜವು ಹೇಗೆ ಹೊರಗೆ ಅಂಟಿರುವುದೋ, ಹಾಗೆಯೇ ಈ ಸಂಸಾರಕ್ಕೆ ಅಂಟಿಕೊಂಡಿದ್ದರೂ ಮನಸ್ಸನ್ನೆಲ್ಲ ಶ್ರೀಹರಿಯಲ್ಲಿ ಇಟ್ಟು, ಅತಿಯಾಸೆ ಮಾಡದೆ ಅಂದರೆ ಎಲ್ಲವೂ ಶ್ರೀಹರಿಯ ಕೃಪೆ ಎಂದು ಭಾವಿಸಿ ಬದುಕಬೇಕು. 
ನುಡಿ ೩: ಮೀನು ಹಿಡಿಯಲು ಗಾಳದ ತುದಿಯಲ್ಲಿ ಮಾಂಸವನ್ನು ಸಿಕ್ಕಿಸುವುದುಂಟು. ಆ ಮಾಂಸದ ತುಂಡುಗೆ ಆಸೆಪಟ್ಟು ಮೀನು ಹೇಗೆ ಗಾಳಕ್ಕೆ ಸಿಕ್ಕಿಬೀಳುತ್ತದೆಯೋ ಹಾಗೆಯೇ ನಾವು ಈ ಸಂಸಾರದ ಕ್ಷಣಿಕ ಸುಖಗಳಿಗೆ ಆಸೆಪಟ್ಟರೆ ಬವಣೆಪಡಬೇಕಾಗುವುದು. ಇದರಿಂದ ತಪ್ಪಿಸಿಕೊಳ್ಳಲು ಕೇವಲ ಕರ್ತವ್ಯಗಳನ್ನು ಮಾಡುತ್ತಾ ಅವುಗಳ ಫಲ-ಅಫಲಗಳ ಆಸೆಯನ್ನು ಬಿಟ್ಟು  ಶ್ರೀಹರಿಯ ಧ್ಯಾನ ಮಾಡಬೇಕು. 

ಶುಕ್ರವಾರ, ಏಪ್ರಿಲ್ 6, 2018

jo jo shree krishna - purandaradAsaru

ಜೋಜೋ ಶ್ರೀಕೃಷ್ಣ ಪರಮಾನಂದ - ಪುರಂದರದಾಸರು 

ಈ ಕೃತಿಯನ್ನು ಕುರಂಜಿ ರಾಗದಲ್ಲಿ ಇಲ್ಲಿ ಕೇಳಿ


।। ಜೋಜೋ ಶ್ರೀಕೃಷ್ಣ ಪರಮಾನಂದ ।
ಜೋಜೋ ಗೋಪಿಯ ಕಂದ ಮುಕುಂದ ।।ಪ।।

।। ಪಾಲಗಡಲದೊಳು  ಪವಡಿಸಿದವನೇ 
ಆಲದೆಲೆಯ ಮೇಲೆ ಮಲಗಿದ ಶಿಶುವೇ ।
। ಶ್ರೀಲತಾಂಗಿಯಳ ಚಿತ್ತದೊಲ್ಲಭನೇ 
ಬಾಲ ನಿನ್ನನು ಪಾಡಿ ತೂಗುವೆನಯ್ಯಾ ।।೧।।

।। ಹೊಳೆವಂಥ ರನ್ನದ ತೊಟ್ಟಿಲ ಮೇಲೆ 
ಥಳಥಳಿಸುವ ಗುಲಗಂಜಿ ಮಾಲೆ ।
। ಅಳದೆ ನೀ ಪಿಡಿದಾಡೆನ್ನಯ ಬಾಲ 
ನಳಿನನಾಭನೇ ನಿನ್ನ ಪಾಡಿ ತೂಗುವೆನು ।।೨।।

।। ಆರ ಕಂದ ನೀನಾರ ನಿಧಾನೀ 
ಯಾರ ರತುನವೋ ನೀನಾರ ಮಾಣಿಕವೋ ।
। ಸೇರಿತು ಎನಗೊಂದು ಚಿಂತಾಮಣಿಯೆಂದು 
ಪೋರ ನಿನ್ನನು ಪಾಡಿ ತೂಗುವೆನಯ್ಯಾ ।।೩।।

।। ಗುಣನಿಧಿಯೇ ನಿನ್ನನೆತ್ತಿಕೊಂಡರೆ 
ಮನೆಯ ಕೆಲಸವಾರು ಮಾಡುವರಯ್ಯಾ ।
। ಮನಕೆ ಸುಖನಿದ್ರೆಯ ತಂದುಕೊ ಬೇಗ 
ಫಣಿಶಯನನೇ ನಿನ್ನ ಪಾಡಿ ತೂಗುವೆನು ।।೪।।

।। ಅಂಡಜವಾಹನ ಅನಂತಮಹಿಮ 
ಪುಂಢರೀಕಾಕ್ಷ ಶ್ರೀ ಪರಮಪಾವನ್ನ ।
। ಹಿಂಡುದೈವರಗಂಡ ಉದ್ದಂಡನೇ 
ಪಾಂಡುರಂಗ ಶ್ರೀ ಪುರಂದರವಿಠ್ಠಲ ।।೫।।

bEga bAro - vAdirAjaru

ಬೇಗ ಬಾರೋ ವೇಲಾಪುರದ ಚೆನ್ನ - ವಾದಿರಾಜರು 

ಈ ಕೃತಿಯನ್ನು ಆನಂದಭೈರವಿ ರಾಗದಲ್ಲಿ ಇಲ್ಲಿ ಕೇಳಿ


।। ಬೇಗ ಬಾರೋ ಬೇಗ ಬಾರೋ । ವೇಲಾಪುರದ ಚೆನ್ನ ಬೇಗ ಬಾರೋ ।।ಪ।।
।। ಬೇಗ ಬಾರೋ ಬೇಗ ಬಾರೋ । ನೀಲಮೇಘವರ್ಣ ಬಾರೋ ।।ಅ.ಪ।।

।। ಇಂದಿರೆ ರಮಣ ಗೋವಿಂದ ಬೇಗ ಬಾರೋ ।
ನಂದನ ಕಂದ ಮುಕುಂದ ಬೇಗ ಬಾರೋ ।।೧।।

।। ಧೀರ ಉದಾರ ಗಂಭೀರ ಬೇಗ ಬಾರೋ ।
ಹಾರ ಲಂಕಾರ ರಘುವೀರ ಬೇಗ ಬಾರೋ ।।೨।।

।। ಋದ್ಧ ಅನಿರುದ್ಧ ಸುರಾಧಾ  ಬೇಗ ಬಾರೋ ।
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।೩।।

।। ರಂಗ ಉತ್ತುಂಗ ನರಸಿಂಗ ಬೇಗ ಬಾರೋ ।
ಕಂಗಳೆಸೆವ ಮೋಹನಾಂಗ ಬೇಗ ಬಾರೋ ।।೪।।

।। ಅಯ್ಯ ವಿಜಯ ಸಾಹಾಯ್ಯ ಬೇಗ ಬಾರೋ ।
ಜೀಯ ಫಣೀಶಯ್ಯಾ ಹಯವದನ ಬೇಗ ಬಾರೋ ।।೫।।


ಈ ಕೃತಿಯ ಸರಳ ಕನ್ನಡದಲ್ಲಿನ ಅರ್ಥ

ವಾದಿರಾಜ ಯತಿಗಳು ಶ್ರೀಹರಿಯನ್ನು ಬೇಗ ಬಾರೋ ಎಂದು ಬಗೆಬಗೆಯಾಗಿ ಕರೆಯುತ್ತಿರುವರು ಈ ಕೃತಿಯಲ್ಲಿ. ಬೇಲೂರು ಚೆನ್ನಕೇಶವನಾದ ನೀಲ ಮೋಡಗಳ ಬಣ್ಣದವನಾದ ಹರಿಯೇ ಬೇಗ ಬಾ ಎಂದು ಆದರಿಸಿದ್ದಾರೆ ಪಲ್ಲವಿಯಲ್ಲಿ.
ನುಡಿ ೧: ಇಂದಿರೆ ಅಥವಾ ಲಕ್ಷ್ಮಿಯ ಪ್ರಿಯನಾದ ಗೋವಿಂದನೇ, ನಂದಗೋಪನ ಕಂದನಾದ ಕೃಷ್ಣನೇ ಬೇಗ ಬಾರೋ.
ನುಡಿ ೨: ಧೈರ್ಯವಂತನೇ, ದಾನಶೀಲನೇ, ಗಂಭೀರ ಚರಿತನೇ, ಲಂಕೆಗೆ ಸಮುದ್ರ ದಾಟಿ ಹೋದವನಾದ ರಾಮನೇ ಬೇಗ ಬಾರೋ .
ನುಡಿ ೩: ಭಗವಂತನೇ, ಯಾರಿಂದಲೂ ಹಿಡಿಯಲಾರದವನೇ, ಎಲ್ಲವನ್ನೂ ಉಳ್ಳವನೇ, ಗರುಡವಾಹನನೆಂದು ಪ್ರಸಿದ್ಧನಾದ ಹರಿಯೇ ಬೇಗ ಬಾರೋ.
ನುಡಿ ೪: ರಂಗನಾಥನೇ, ಎಲ್ಲದಕ್ಕಿಂತ ಉತ್ತಮನಾದವನೇ, ನರಸಿಂಹಾವತಾರನೇ, ಕಣ್ಣುಗಳು ತುಂಬಿಕೊಳ್ಳಲು ಸಾಲದ ಚೆಲುವು ಉಳ್ಳವನೇ ಬೇಗ ಬಾರೋ.
ನುಡಿ ೫: ಎಲ್ಲರಿಗೂ ಹಿರಿಯನಾದವನೇ, ಅರ್ಜುನನ ಸಾರಥಿಯಾದವನೇ, ಎಲ್ಲರ ಒಡೆಯನೇ, ಹಾವಿನ ಮೇಲೆ ಮಲಗಿದವನೇ ಹರಿಯೇ ಬೇಗ ಬಾರೋ.