ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು
ಈ ಕೃತಿಯನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ.
।। ಈಸ ಬೇಕು ಇದ್ದು ಜಯಿಸಬೇಕು ।।ಪ।।
।। ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ।।ಅ.ಪ.।।
।। ತಾಮರಸ ಜಲದಂತೆ ಪ್ರೇಮವಿತ್ತು ಭವದೊಳು ।
ಸ್ವಾಮಿ ರಾಮನೆನುತ ಪಾಡಿ ಕಾಮಿತಕ್ಕೆ ಕೊಂಬೊರೆಲ್ಲ ।।೧।।
।। ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ।
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ನೆನೆವರೆಲ್ಲ ।।೨।।
।। ಮಾಂಸದಾಸೆಗೆ ಸಿಲುಕಿ ಮತ್ಸ್ಯ ಹಿಂಸೆಪಟ್ಟ ಪರಿಯಂತೆ ।
ಮೋಸಹೋಗದ್ಹಾಂಗೆ ಜಗದೀಶ ಪುರಂದರವಿಠ್ಠಲನೆನುತ ।।೩।।
ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ
ಕರ್ಮಸಿದ್ಧಾಂತದ ಸಾರವನ್ನೆಲ್ಲಾ ಎರಡೇ ಸಾಲಿನಲ್ಲಿ ಅಡಗಿಸಿಟ್ಟಿರುವರು ಪುರಂದರದಾಸರು. ಈ ಸಂಸಾರದ ಅಥವಾ ನಮ್ಮ ಜೀವನದ ಸುಖದುಃಖಗಳ ಜಂಜಾಟದಲ್ಲಿ ಪ್ರತಿಫಲದ ಅಪೇಕ್ಷೆ ಇಲ್ಲದೆ ಕರ್ತವ್ಯಗಳನ್ನು ಮಾಡಬೇಕು, ಮಾಡಿ ಮುಕ್ತಿಯನ್ನು ಜಯಿಸಬೇಕು.
ನುಡಿ ೧: ಹೇಗೆ ತಾವರೆಯ ಎಲೆಯ ಮೇಲಿರುವ ನೀರಿನ ಹನಿ ಅಂತದೆಯೇ ಇರುವುದೋ, ಹಾಗೆಯೇ ಈ ಜೀವನದಲ್ಲಿ ಇದ್ದೂ ಅದರ ಒಳಿತು-ಕೆಡಕುಗಳನ್ನು ಅಂಟಿಸಿಕೊಳ್ಳದಂತೆ, ಪ್ರತಿಯೊಂದು ಕೆಲಸವನ್ನೂ ಶ್ರೀಹರಿಯ ಕೆಲಸವೆಂದು ಭಾವಿಸಬೇಕು.
ನುಡಿ ೨: ಗೇರುಹಣ್ಣಿನಲ್ಲಿ ಬೀಜವು ಹೇಗೆ ಹೊರಗೆ ಅಂಟಿರುವುದೋ, ಹಾಗೆಯೇ ಈ ಸಂಸಾರಕ್ಕೆ ಅಂಟಿಕೊಂಡಿದ್ದರೂ ಮನಸ್ಸನ್ನೆಲ್ಲ ಶ್ರೀಹರಿಯಲ್ಲಿ ಇಟ್ಟು, ಅತಿಯಾಸೆ ಮಾಡದೆ ಅಂದರೆ ಎಲ್ಲವೂ ಶ್ರೀಹರಿಯ ಕೃಪೆ ಎಂದು ಭಾವಿಸಿ ಬದುಕಬೇಕು.
ನುಡಿ ೩: ಮೀನು ಹಿಡಿಯಲು ಗಾಳದ ತುದಿಯಲ್ಲಿ ಮಾಂಸವನ್ನು ಸಿಕ್ಕಿಸುವುದುಂಟು. ಆ ಮಾಂಸದ ತುಂಡುಗೆ ಆಸೆಪಟ್ಟು ಮೀನು ಹೇಗೆ ಗಾಳಕ್ಕೆ ಸಿಕ್ಕಿಬೀಳುತ್ತದೆಯೋ ಹಾಗೆಯೇ ನಾವು ಈ ಸಂಸಾರದ ಕ್ಷಣಿಕ ಸುಖಗಳಿಗೆ ಆಸೆಪಟ್ಟರೆ ಬವಣೆಪಡಬೇಕಾಗುವುದು. ಇದರಿಂದ ತಪ್ಪಿಸಿಕೊಳ್ಳಲು ಕೇವಲ ಕರ್ತವ್ಯಗಳನ್ನು ಮಾಡುತ್ತಾ ಅವುಗಳ ಫಲ-ಅಫಲಗಳ ಆಸೆಯನ್ನು ಬಿಟ್ಟು ಶ್ರೀಹರಿಯ ಧ್ಯಾನ ಮಾಡಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ