ಸೋಮವಾರ, ಜನವರಿ 15, 2018

benakananolle - ugAbhOga - purandaradAsaru

ಬೆನಕನನೊಲ್ಲೆನವ್ವ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ದೇಶ ರಾಗದಲ್ಲಿ ಇಲ್ಲಿ ಕೇಳಿ.


।। ಬೆನಕನೊಲ್ಲೆನವ್ವ ಕುನಕಿಯಾಡುವನ । ಷಣ್ಮುಖನನೊಲ್ಲೆನವ್ವ ಬಹುಬಾಯಿಯವನ ।।
।। ಇಂದ್ರನನೊಲ್ಲೆನವ್ವ ಮೈಯೆಲ್ಲ ಕಣ್ಣಿನವ । ಚಂದ್ರನನೊಲ್ಲೆನವ್ವ ಖಳೆಗುಂದುವನ ।।
।। ರವಿಯನೊಲ್ಲೆನವ್ವ ಉರಿದು ಹೂಳುವನ । ಹರನನೊಲ್ಲೆನವ್ವ  ಮರುಳುಗೊಂಬುವ ।।
।। ಚೆಲುವ ಚೆನ್ನಿಗರಾಯ ಜಗಕೆಲ್ಲ ಒಡೆಯನ ತಾರೆ । ಪುರಂದರವಿಠ್ಠಲನ ತಾರೆ ।।

ಸರಳ ಕನ್ನಡದಲ್ಲಿ ಈ ಉಗಾಭೋಗದ ಅರ್ಥ:

ಲಕ್ಷ್ಮಿಯು ಕ್ಷೀರಸಮುದ್ರದಿಂದ ಜನಿಸಿ ಬಂದಾಗ ಅವಳ ಸೊಬಗಿಗೆ ಬೆರಗಾಗಿ ಸುರಾಸುರರೆಲ್ಲ ಅವಳನ್ನು ವರಿಸಲು ಸಾಲು ನಿಲ್ಲುವರು. ಆಗ ಲಕ್ಷ್ಮಿಯು ಒಬ್ಬೊಬ್ಬ ದೇವತೆಯ ಅವಗುಣವನ್ನು ಎಣಿಸಿ, ಅವರನ್ನು ನಿರಾಕರಿಸಿ, ಕಡೆಯಲ್ಲಿ ಪರಿಪೂರ್ಣನಾದ ಶ್ರೀಹರಿಯನ್ನು ವರಿಸುವಳು. ಈ ಪುರಾಣ ಕಥೆಯ ಸನ್ನಿವೇಶವನ್ನು ಬಣ್ಣಿಸುತ್ತದೆ ಪುರಂದರದಾಸರ ಈ ಉಗಾಭೋಗ.

ಗಣಪತಿಯು ಕುನಕಿಯಾಡುವ ಚಿಕ್ಕಹುಡುಗ. ಹಾಗಾಗಿ ಅವನನ್ನು ವರಿಸಲಾರೆ. ಹಾಗೆಯೇ ಷಣ್ಮುಖನಿಗೆ ಆರು ಬಾಯಿಗಳು. ಆದ್ದರಿಂದ ವರಿಸಲಾರೆ. ಇಂದ್ರ ಸಹಸ್ರಾಕ್ಷ ಅಥವಾ ಅನೇಕ ಕಣ್ಣುಳ್ಳವನು. ಹಾಗಾಗಿ ವರಿಸಲಾರೆ. ಚಂದ್ರ ತಿಂಗಳಲ್ಲಿ ಒಂದು ಪಕ್ಷ  ಕ್ಷೀಣಿಸುತ್ತಾನೆ. ಹಾಗಾಗಿ ವರಿಸಲಾರೆ. ಸೂರ್ಯನು ಸುಡುವ ಬೆಂಕಿಯಂತೆ ಇರುವನು. ಹಾಗಾಗಿ ವರಿಸಲಾರೆ.  ಶಿವನು ಮೋಹಿನಿಯನ್ನು ಕಂಡು ಮರುಳುಗೊಂಡವನು. ಹಾಗಾಗಿ ವರಿಸಲಾರೆ. ಯಾವ ಅವಗುಣವೂ ಇಲ್ಲದ ಜಗದೊಡೆಯನಾದ ಹರಿಯ ತೋರಿಸೇ ಸಖಿ. ಆ ಹರಿಯನ್ನು ವರಿಸುವೆ, ಎನ್ನುವಳು ಸಾಗರಸುತೆಯಾದ ಲಕ್ಷ್ಮೀ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ