ಮುರಹರ ನಗಧರ ನೀನೇ ಗತಿ - ಪುರಂದರದಾಸರು
ಈ ಕೃತಿಯನ್ನು ಸಿಂಧುಭೈರವಿ ರಾಗದಲ್ಲಿ ಇಲ್ಲಿ ಕೇಳಿ.
।। ಮುರಹರ ನಗಧರ ನೀನೇ ಗತಿ । ಧರಣಿ-ಲಕ್ಷ್ಮೀಕಾಂತ ನೀನೇ ಗತಿ ।।ಪ||
।। ಶಕಟಮರ್ದನ ಶರಣಾಗತ ವತ್ಸಲ । ಮಕರಕುಂಡಲಧರ ನೀನೇ ಗತಿ ।।
।। ಅಕಳಂಕ ಚರಿತ ಆದಿನಾರಾಯಣ । ರುಕುಮಿಣಿಪತಿ ಕೃಷ್ಣ ನೀನೇ ಗತಿ ।।೧।।
।। ಮನೆಮನೆಗಳ ಪೊಕ್ಕು ಕೆನೆಹಾಲು ಬೆಣ್ಣೆಯ । ಪ್ರಮಿತ ಮೆದ್ದ ಹರಿ ನೀನೇ ಗತಿ ।।
।। ಅನುದಿನ ಭಕುತರ ಬಿಡದೆ ಸಲಹುವ । ಘನಮಹಿಮ ಕೃಷ್ಣ ನೀನೇ ಗತಿ ।।೨।।
।। ಪನ್ನಗಶಯನ ಸುಪರ್ಣಗಮನ । ಪೂರ್ಣಚರಿತ ಹರಿ ನೀನೇ ಗತಿ ।।
।। ಹೊನ್ನಹೊಳೆಯಲಿ ಪುರಂದರವಿಠ್ಠಲ । ಚೆನ್ನ ಲಕ್ಷ್ಮೀಕಾಂತ ನೀನೇ ಗತಿ ।।೩।।
ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ:
ಹರಿಯೇ ನಮ್ಮೆಲ್ಲರಿಗೂ ಗತಿ ಎಂಬುವ ಸರಳ ಭಾವ ಈ ಕೃತಿಯದ್ದು.
ಪ: ಮುರಾಸುರನ ಕೆಡುವಿದ, ಗೋವರ್ಧನ ಬೆಟ್ಟವನ್ನೆತ್ತಿದ, ಲಕ್ಷ್ಮೀ-ಭೂದೇವಿಯರ ಒಡೆಯನಾದ ಹರಿಯೇ ನಮಗೆ ಗತಿ.
ನುಡಿ ೧: ಶಕಟಾಸುರನ ಸಂಹರಿಸಿದ, ಶರಣು ಬಂದವರ ಪೊರೆಯುವನಾದ, ಮಕರಕುಂಡಲ/ಓಲೆಗಳ ಧರಿಸಿದ, ಶುಭ್ರ ಚರಿತೆಯ ಹೊಂದಿದ, ನಾರಾಯಣ ಎನಿಸಿಕೊಂಡಿಹ, ರುಕ್ಮಿಣಿಯ ಪತಿಯಾದ ಕೃಷ್ಣನೇ ಗತಿ.
ನುಡಿ ೨: ಕೃಷ್ಣಾವತಾರದ ಬಾಲ್ಯದಲ್ಲಿ ಗೋಪಿಕೆಯರ ಮನೆಗಳನ್ನು ಹೊಕ್ಕು ಕೆನೆಹಾಲು ಬೆಣ್ಣೆ ಮೊದಲಾದವುಗಳ್ಳನ್ನ ಬೇಕಾದಷ್ಟು ತಿಂದ, ಭಕ್ತರ ಸಲಹುವನಾದ, ಅಪಾರ ಮಹಿಮೆಯುಳ್ಳವನಾದ ಕೃಷ್ಣನೇ ಗತಿ.
ನುಡಿ ೩: ಹಾವಿನ ಮೇಲೆ ಮಲಗಿದವನಾದ, ಗರುಡನ ಮೇಲೆ ಕುಳಿತು ಹಾರುವವನಾದ, ಪೂರ್ಣಚರಿತನಾದ, ಸುಂದರನಾದ, ಲಕ್ಷ್ಮೀ ಒಡೆಯನಾದ, ಹೊನ್ನಹೊಳೆಯಲ್ಲಿ ನಿಂತ ಹರಿಯೇ ಗತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ